"ನಾನೇಕೆ ನಾಸ್ತಿಕ " ಭಾರತೀಯ ಕ್ರಾಂತಿಕಾರಿ ಭಗತ್‌ ಸಿಂಗ್‌ ೧೯೩೦ರಲ್ಲಿ ಲಾಹೋರ್‌ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಸಮಯದಲ್ಲಿ ಬರೆದ ಪ್ರಬಂಧ ಮಾದರಿಯ ಲೇಖನ. == ಹಿನ್ನೆಲೆ == ಭಗತ್‌ ಸಿಂಗ್‌ ಅವರು ಲಾಹೋರ್‌ ಜೈಲಿನಲ್ಲಿ ಇದ್ದ ಸಂದರ್ಭದಲ್ಲಿಯೇ ಇನ್ನೋರ್ವ ಸ್ವಾತಂತ್ರ್ಯ ಹೋರಾಟಗಾರರಾದ ಬಾಬಾ ರಣಧೀರ್ ಸಿಂಗ್‍ರವರು ಕೂಡ ಅದೇ ಜೈಲಿನಲ್ಲಿ ಇದ್ದರು. ರಣಧೀರ್ ಸಿಂಗ್‍ರವರು ದೇವರನ್ನು ನಂಬುವ ಧಾರ್ಮಿಕ ವ್ಯಕ್ತಿಯಾಗಿದ್ದರು. ಭಗತ್‍ಸಿಂಗ್ ನಾಸ್ತಿಕರು ಎಂದು ತಿಳಿದಾಗ ಅವರಿಗೆ ತುಂಬಾ ನೋವಾಯಿತು. ಆಗ ಮರಣದಂಡನೆಗೆ ಒಳಗಾಗಿರುವವರಿಗೆಂದೇ ಮೀಸಲಿದ್ದ ಸೆಲ್ ನಲ್ಲಿ ಸೆರೆಯಾಗಿದ್ದ ಭಗತ್‍ ಸಿಂಗ್‍ರನ್ನು ಭೇಟಿಯಾದರು.ಭಗತ್ ಸಿಂಗ್ ಅವರಿಗೆ ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ತರಲು ಪ್ರಯತ್ನಿಸಿ ವಿಫಲರಾದರು. ಆಗ ಬಾಬಾ ರಣಧೀರ್ ಸಿಂಗ್ ಕೋಪವನ್ನು ತಡೆದುಕೊಳ್ಳಲಾಗದೆ ಮೂದಲಿಸುತ್ತಾ “ನಿಮಗೆ ಖ್ಯಾತಿಯಿಂದ ತಲೆ ತಿರುಗಿದೆ, ಅಹಂಕಾರ ಬಂದಿದೆ; ಅದು ನಿಮ್ಮ ಮತ್ತು ದೇವರ ನಡುವೆ ಕಪ್ಪು ತೆರೆಯನ್ನು ಎಳೆದಿದೆ.” ಎಂಬಂತಹ ಅರ್ಥ ಬರುವ ಹೇಳಿದ ಮಾತಿಗೆ ಉತ್ತರವಾಗಿ "ನಾನೇಕೆ ನಾಸ್ತಿಕ " ಎಂಬ ಪ್ರಬಂಧ ಮಾದರಿಯ ಲೇಖನ ಬರೆದರು. ಮೂಲತಃ ಮಾರ್ಕ್ಸ್ ವಾದಿಯಾಗಿದ್ದ ಭಗತ್ ಧರ್ಮಗಳನ್ನು ವಿರೋಧಿಸುತ್ತಿದ್ದವರಾಗಿದ್ದರು. == ಪ್ರಕಟಣೆ == ಭಗತ್ ಸಿಂಗ್ ಅವರ ಮರಣದ ಬಳಿಕ ಈ ಪ್ರಬಂಧವನ್ನು ೨೭ ಸೆಪ್ಟೆಂಬರ್ ೧೯೩೧ರಂದು ಲಾಲಾ ಲಜಪತ್ ರಾಯ್ ಅವರ ಇಂಗ್ಲಿಷ್ ಪತ್ರಿಕೆ ದಿ ಪೀಪಲ್ ನಲ್ಲಿ ಪ್ರಕಟಿಸಲಾಯಿತು. == ಭಾಷಾಂತರಗಳು == ಪೆರಿಯಾರ್ ಇ.ವಿ.ರಾಮಸಾಮಿಯವರ ಕೋರಿಕೆಯ ಮೇರೆಗೆ, ಪಿ.ಜೀವಾನಂದಂ ಅವರುಈ ಪ್ರಬಂಧವನ್ನು ತಮಿಳು ಭಾಷೆಗೆ ಅನುವಾದಿಸಿದರು. ಪ್ರಬಂಧದ ತಮಿಳು ಆವೃತ್ತಿಯು "ಕುಡಿ ಅರಸಿ" ಎಂಬ ಪತ್ರಿಕೆಯಲ್ಲಿ ೧೯೩೫ರಲ್ಲಿ ಪ್ರಕಟವಾಯಿತು. ಮೂಲ ಇಂಗ್ಲಿಷ್ ಪಠ್ಯ ಇಂದಿಗೂ ಲಭ್ಯವಿರದಿರುವುದರಿಂದ, ಇತರ ಭಾಷೆಗಳ ಅನುವಾದದ ಮೂಲ ತಮಿಳು ಪಠ್ಯವೇ ಆಗಿದೆ.. == ಪ್ರಬಂಧದ ಸಾರಾಂಶ == ಪ್ರಬಂಧದಲ್ಲಿ, ಭಗತ್ ಸಿಂಗ್ ತನ್ನ ನಾಸ್ತಿಕವಾದಕ್ಕೆ ಕಾರಣ ತನಗಿರುವ ಜನಪ್ರಿಯತೆ ಅಥವಾ ಉಳಿದವರು ಹೇಳುವಂತೆ ತನ್ನ ಅಹಂಕಾರ ಕಾರಣವಲ್ಲ ಎಂದು ಹೇಳುತ್ತಾರೆ. ತನ್ನ ಕುಟುಂಬವು ದೇವರಲ್ಲಿ ದೃಢವಾದ ನಂಬಿಕೆಯುಳ್ಳದೆಂದು ಉಲ್ಲೇಖಿಸುತ್ತಾರೆ. ತಾನು ಸ್ವತಃ ಧಾರ್ಮಿಕ ಹುಡುಗನಾಗಿ ಬೆಳೆದವನು, ಅವನು ಗಂಟೆಗಟ್ಟಲೆ ಪ್ರಾರ್ಥನೆಗಳನ್ನು ಪಠಿಸುತ್ತಿದ್ದವನು ಮತ್ತು ಇದರ ಹೊರತಾಗಿಯೂ ಹೇಗೆ ನಾಸ್ತಿಕನಾದೆನು ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ಆತ ತನ್ನ ನಾಸ್ತಿಕತೆ ಕೂಡ ಕ್ರಾಂತಿಕಾರಿ ಸಂಘಟನೆಯೊಂದಿಗಿನ ಒಡನಾಟದ ಫಲಿತಾಂಶವಲ್ಲ ಮತ್ತು ಆತನ ಒಡನಾಡಿಗಳಲ್ಲಿ ಹೆಚ್ಚಿನವರು ವಾಸ್ತವವಾಗಿ ಆಸ್ತಿಕರೆಂಬ ಉಲ್ಲೇಖ ಇಲ್ಲಿದೆ. ದೇವರನ್ನು ದೃಢವಾಗಿ ನಂಬಿದ್ದ ಸಚೀಂದ್ರನಾಥ ಸಾನ್ಯಾಲ್ ಅವರ ಉದಾಹರಣೆಯನ್ನು ಉಲ್ಲೇಖಿಸುತ್ತಾರೆ. == ಉಲ್ಲೇಖಗಳು ==